Saturday, November 29, 2014

ಗಿರಿಗದ್ದೆಯಲ್ಲಿ ಸಮಾನತೆಯ ಪಾಠ

ಅಸಮಾನತೆ ಅನ್ನುವುದು ನಮ್ಮೊಳಗೆ, ಎಲ್ಲರೊಳಗೆ, ಎಲ್ಲದರೊಳಗೆ ಬೆರೆತು ನಮ್ಮನ್ನು ಮರೆಯಿಸುತ್ತಿರಬೇಕಾದರೆ ಕೆಲವು ಘಟನೆಗಳು, ಕೆಲವು ಜನರು, ಕೆಲವು ಪದ್ಧತಿಗಳು ಸಮಾನತೆಯನ್ನು ಜಾರಿಗೆ ತರುತ್ತಿವೆ. ಕುಕ್ಕೆ ಸುಬ್ರಮಣ್ಯ ಮಡೆಸ್ನಾನ ಎನ್ನುವ ಹೆಸರಿನಲ್ಲಿ ಬಹಳ ಸದ್ದು ಗದ್ದಲ ಎಬ್ಬಿಸುತ್ತಲಿರುತ್ತದೆ. ಮೊನ್ನೆ ಉಡುಪಿಯಲ್ಲಿ ಊಟದ ಪಂಕ್ತಿಯಿಂದ ಒಬ್ಬರನ್ನು ಮಧ್ಯದಲ್ಲೆ ಎಬ್ಬಿಸಿದರು ಎನ್ನುವ ಸುದ್ದಿ ಎಲ್ಲ ಕಡೆ ಸದ್ದು ಮಾಡಿತ್ತು. ಪಂಕ್ತಿ ಊಟ ಬೇಕೋ ಬೇಡವೋ ಅಥವಾ ಮಡೆಸ್ನಾನ ಬೇಕ ಬೇಡವೋ ಎನ್ನುವ ವಾದಕ್ಕೆ ಇಳಿಯದೆ, ಸುಬ್ರಮಣ್ಯದ ಗಿರಿಗದ್ದೆಯಲ್ಲಿ ಸಮಾನತೆಯ ಸಮಾರಾಧನೆಯ ಬಗ್ಗೆ ಬರೆಯೋಣ ಏಂದು ಅನಿಸಿತು.

ಗಿರಿಗದ್ದೆಯಲ್ಲಿ ಏನಿದೆ ಎಂದು ನಿಮಗೆ ಅನಿಸುತ್ತಿರಬಹುದು. ಅಲ್ಲಿ ಯವೂದೇ ಮಠವಾಗಲಿ, ದೇವಸ್ಥಾನವಾಗಲಿ ಮತ್ತೊಂದಾಗಲಿ ಇಲ್ಲವೇ ಇಲ್ಲ. ಆದರೆ ಗಿರಿಗದ್ದೆಯಲ್ಲಿ ಭಟ್ಟರ ಮನೆಯಿದೆ. ಕುಮಾರ ಪರ್ವತಕ್ಕೆ ಚಾರಣಕ್ಕೆ ಹೋಗುವ ಎಲ್ಲರಿಗೂ ಬೆಳಗ್ಗೆ ತಿಂಡಿ ಬೇಕಾದರೆ ತಿಂಡಿ, ಮಧ್ಯಾನದ ಊಟ ಬೇಕಾದರೆ ಊಟ ಮತ್ತು ರಾತ್ರಿ ಉಳಿದುಕೊಳ್ಳಬಯಸುವವರು ಅಲ್ಲಿಯೇ ತಂಗಿ ಊಟ ಮಾಡಿಕೊಂಡಿರಬಹುದು. ಇದರಲ್ಲೇನಿದೆ ಎಂದು ನಿಮಗೆ ಅನಿಸುತ್ತಿರಬೇಕು! ಭಟ್ಟರು ಊಟವನ್ನು ಪುಕ್ಕಟೆಯಾಗಿ ಹಾಕುವುದಿಲ್ಲ, ಆದರೆ ಎಲ್ಲರಿಗೂ ಊಟವಿರುತ್ತೆ. ಎಲ್ಲರಿಗೂ ಒಂದೇ ಊಟ. ತಟ್ಟೆಗಳನ್ನು ಮತ್ತು ಮಜ್ಜಿಗೆಗೆ ಕಪ್ಪುಗಳನ್ನು ಇಟ್ಟಿರುತ್ತಾರೆ, ಎಲ್ಲರೂ ಊಟ ಮಾಡಿ ತಟ್ಟೆಗಳನ್ನು ತೊಳೆದು ಮೊದಲಿದ್ದ ಜಾಗದಲ್ಲಿ ಇಡಬೇಕು. ಒಂದೇ ರೀತಿಯ ಊಟ, ನಿಮ್ಮ ಹತ್ತಿರ ಎಷ್ಟೇ ದುಡ್ಡಿದ್ದರೂ ಅನ್ನ, ಸಾರು ಮತ್ತು ಮಜ್ಜಿಗೆ ಬಿಟ್ಟರೆ ಬೇರೆನನ್ನು ಕೊಡಲ್ಲ. ಅವರ ಬಾಳೆ ತೋಟದ ಬಾಳೆಹಣ್ಣು ಇದ್ದರೆ ಕೊಡುತ್ತಾರೆ. ಮಲಗಲು ಅಷ್ಟೇ, ಯಾರು ಮೊದಲು ಬರುತ್ತಾರೆ ಅವರಿಗೇ ಮೊದಲ ಆದ್ಯತೆ. ಭಟ್ಟರ ಮನೆ ಮೊದಲು ಹೇಗಿತ್ತೊ ಇವತ್ತೂ ಹಾಗೆ ಇದೆ.
ಇದು ಗೂಗಲ್‍ನಿಂದ ತೆಗೆದಿದ್ದು. 

ಮೊನ್ನೆ ನಾವು ಭಟ್ಟರ ಮನೆಗೆ ಹೋದಾಗ ತೆಗೆಸಿಕೊಂಡ ಪಟ. ಇನ್ನೊಬ್ಬ ಭಟ್ಟರು, ಊಟದ ನಂತರ ಮಲಗಿಬಿಟ್ಟರು. 


ನಿಮಗೆ ಮತ್ತೂ ಅನಿಸುತ್ತಿರಬೇಕು ಇದರಲ್ಲೇನು ವಿಶೇಷ ಎಂದು. ನಾನು ಸಾಕಷ್ಟು ಕಡೆ ಚಾರಣಕ್ಕೆ ಹೋಗಿದ್ದೇನೆ. ಎಲ್ಲ ಕಡೆಯೂ ನಗರಗಳಲ್ಲಿ ಏನೇನು ಸಿಗುತ್ತದೆ ಅದನ್ನೇಲ್ಲ ತಂದು ದುಬಾರಿ ಬೆಲೆಗೆ ಮಾರುವ ಅಂಗಡಿಗಳು ಸಿಗುತ್ತವೆ. ದೂರದ ಹಿಮಾಲಯದ ಚಾರಣ ತಾಣಗಳಿಂದ ಇಡಿದು, ನಮ್ಮ ಸುತ್ತಲ ಬೆಟ್ಟಗಳಲ್ಲಿರುವ ಅಂಗಡಿಗಳು ಹೊರತಲ್ಲ. ಭಟ್ಟರ ಮನೆಯಲ್ಲಿ ಟಿ.ವಿಯಿದೆ, ಅವರ ಹತ್ತಿರ ಮೊಬೈಲ್ ಕೂಡ ಇದೆ. ನಗರಗಳ ಪರಿಚಯವಿದೆ. ಆದರೂ ಅವರ ಮನೆಯಲ್ಲಿ ಎಲ್ಲರೂ ಒಂದೇ.

ನಾಗರೀಕತೆಯಿಂದ ಜಾಗತೀಕರಣದವರೆಗೆ ಬೆಳೆದ ನಾವು ಅಸಮಾನತೆಯನ್ನು ಮಾತ್ರ ಹೆಚ್ಚಿಸುತ್ತಲೇ ಬಂದಿದ್ದೇವೆ. ಆದರೆ ಗಿರಿಗದ್ದೆ ಭಟ್ಟರಂತವರು ತಿಳಿದೋ ತಿಳಿಯದೆಯೋ ಸಮಾನತೆಯ ಗಿಡವನ್ನು ಪೋಷಿಸುತ್ತಿದ್ದಾರೆ. ಬಸವಣ್ಣ ಮತ್ತು ಗಾಂಧಿಜೀ ಇದನ್ನೆ ಅಲ್ಲವೇ ಮಾಡಿದ್ದು.    

1 comment:

prashasti said...

ಕುಮಾರಪರ್ವತ ಚಾರಣ ಅಂದ್ರೆ ಎಲ್ರಿಗೂ ನೆನ್ಪಾಗೋದು ಭಟ್ಟರ ಮನೆ. ಹತ್ತೋ ಹೊತ್ತಿಗೆ ಇಲ್ಲಾ ಇಳಿಯೋ ಹೊತ್ತಿಗೆ ಅವ್ರ ಮನೆಯ ಹೊಕ್ಕೇ ಹೊಕ್ಕಿರ್ತಾರೆ ಎಲ್ಲರೂ. ನಾವು ಹತ್ತುತ್ತಾ ಪುಷ್ಪಗಿರಿಯ ಕಡೆಯಿಂದ ಹತ್ತಿದ್ರೂ ಇಳೀತಾ ಸುಬ್ರಹ್ಮಣ್ಯದ ಕಡೆಯಿಂದ ಇಳಿದಿದ್ರಿಂದ ಭಟ್ಟರ ಮನೆ ಹೊಕ್ಕೋ ಅವಕಾಶ ಸಿಕ್ಕಿತ್ತು. ನೀನು ಯಾರು, ಎಲ್ಲಿಯವ ಎಂಬ ಯಾವ ಪ್ರಶ್ನೆಯೂ ಕೇಳದೆ ಊಟ ಹಾಕುತ್ತಿದ್ದ ಅವರ ಸಮಾನತೆಯ ಜೊತೆಗೆ ಕೇಳಲು ಸಮಯವಿದ್ದವರಿಗೆ ಭಟ್ಟರ ಮೊದಲ ದಿನಗಳ ಕಷ್ಟಗಳೂ ಮಾತಾಗಿ ಬರುತ್ತಿದ್ವು. ಅವರು ಕಾಸರಗೋಡಿನಿಂದ ಇಲ್ಲಿಗೆ ಬಂದ ಕತೆ, ಯಾವ ವ್ಯವಸ್ಥೆಯೂ ಇಲ್ಲದ ಕಾಲದಲ್ಲಿ ತಲೆ ಮೇಲೆ ಹೊತ್ತೇ ಭತ್ತ, ಬೇಳೆಗಳನ್ನು ಪೇಟೆಯಿಂದ ಹೊತ್ತು ತಂದ ಕತೆ, ನಿಮಗೆಲ್ಲಾ ಗಂಟೆ ಗಂಟೆ, ನಮಗೆ ಸುಬ್ರಹ್ಮಣ್ಯಕ್ಕೆ ಹೋಗೋಕೆ ಒಂದೇ ಗಂಟೆ ಅಂತ ಆಡಿದ ಮಾತುಗಳನ್ನೆಲ್ಲಾ ನೆನೆಸಿಕೊಂಡ್ರೆ ಈಗಲೂ ಅವರ ಬಗ್ಗೆ ಮೆಚ್ಚುಗೆಯಾಗುತ್ತೆ. ಇಂಥವ್ರ ಸಂಖ್ಯೆ ಸಾವಿರವಾಗ್ಲಿ ಅಂತ ಹಾರೈಸುವಂತಾಗುತ್ತೆ..